The end of arrogance in Kannada Moral Stories by Danger Writer books and stories PDF | ಅಹಂಕಾರದ ಅಂತ್ಯ

Featured Books
Categories
Share

ಅಹಂಕಾರದ ಅಂತ್ಯ

ಆ ಊರಿನ ಹೆಸರು ರುದ್ರಪುರ. ಕಡಿದಾದ ಬೆಟ್ಟಗಳ ಸಾಲು, ದಟ್ಟವಾದ ಕಾಡು ಮತ್ತು ಹರಿಯುವ ನದಿಯ ಮಧ್ಯೆ ಇದ್ದ ಆ ಊರಿನಲ್ಲಿ ಪ್ರಕೃತಿಯ ಸೌಂದರ್ಯ ಎಷ್ಟಿತ್ತೋ, ಅಷ್ಟೇ ಭಯವೂ ಇತ್ತು. ಅದಕ್ಕೆ ಕಾರಣ ಪ್ರತಾಪ್ ವರ್ಮ.

ಪ್ರತಾಪ್ ವರ್ಮ ರುದ್ರಪುರದ ಅತಿ ದೊಡ್ಡ ಜಮೀನ್ದಾರ್. ಹಣ, ಅಧಿಕಾರ, ದೈಹಿಕ ಬಲ ಮೂರೂ ಅವನ ಬಳಿ ಇತ್ತು. ಆದರೆ, ಆ ಎಲ್ಲದರ ಜೊತೆಗೆ ಅವನ ತಲೆಯಲ್ಲಿದ್ದದ್ದು ಒಂದೇ ಅದುವೇ ಅಹಂಕಾರ. ಈ ಊರಿನಲ್ಲಿ ನನಗಿಂತ ಶಕ್ತಿವಂತನಾಗಲಿ, ಬುದ್ಧಿವಂತನಾಗಲಿ ಯಾರೂ ಇಲ್ಲ. ನಾನು ಅಂದುಕೊಂಡಿದ್ದೇ ಕಾನೂನು, ನಾನು ಗೀಚಿದ್ದೇ ಲಕ್ಷಣ ರೇಖೆ ಎಂಬುದು ಅವನ ಅಚಲ ನಂಬಿಕೆ. ದೀನ-ದಲಿತರನ್ನು ಕಂಡರೆ ಅವನಿಗೆ ಕೀಳರಿಮೆ. ಪ್ರಕೃತಿಯನ್ನು ತನ್ನ ಕಾಲಡಿ ಇಟ್ಟುಕೊಳ್ಳಬಹುದು ಎಂಬುದು ಅವನ ಭ್ರಮೆ.
ಆದರೆ, ಅದೇ ಊರಿನ ಒಂದು ಮೂಲೆಗೆ ಸಣ್ಣ ಗುಡಿಸಲಿನಲ್ಲಿ ವಾಸವಾಗಿದ್ದ ಮುದುಕ ಸಿದ್ಧಯ್ಯನ ಮಾತುಗಳೇ ಬೇರೆಯಾಗಿದ್ದವು. ಸಿದ್ಧಯ್ಯ ಊರಿನ ಹಿರಿಯ, ಅನುಭವಸ್ಥ. ಅವನು ಸದಾ ಹೇಳುತ್ತಿದ್ದ:
ಅತಿಯಾದ ಅಹಂಕಾರ ಮನುಷ್ಯನನ್ನು ಕುರುಡನನ್ನಾಗಿ ಮಾಡುತ್ತದೆ. ಪ್ರಕೃತಿಯ ಮುಂದೆ ಯಾರೂ ದೊಡ್ಡವರಲ್ಲ. ಅಹಂಕಾರದ ಕೋಟೆ ಎಷ್ಟು ಎತ್ತರಕ್ಕೆ ಬೆಳೆಯುತ್ತದೋ, ಅದು ಬೀಳುವಾಗ ಆಗುವ ಶಬ್ದ ಅಷ್ಟೇ ಭೀಕರವಾಗಿರುತ್ತದೆ."
ಈ ಮಾತು ಪ್ರತಾಪ್ ವರ್ಮನ ಕಿವಿಗೆ ಬಿದ್ದಾಗ ಅವನು ಗಹಗಹಿಸಿ ನಕ್ಕಿದ್ದ. ಆ ಮುದುಕನಿಗೆ ವಯಸ್ಸಾಗಿ ತಲೆ ಕೆಟ್ಟಿದೆ. ಪ್ರಕೃತಿಯನ್ನು ನಾನೇ ಕಂಟ್ರೋಲ್ ಮಾಡುತ್ತೇನೆ, ಇನ್ನು ನನಗೆ ಯಾರು ಎದುರು? ಎಂದು ಸವಾಲು ಹಾಕಿದ್ದ.
ಒಂದು ದಿನ, ರುದ್ರಪುರಕ್ಕೆ ದೊಡ್ಡ ಸಂಕಷ್ಟ ಎದುರಾಯಿತು. ಮುಂಗಾರು ಮಳೆ ಎಂದಿಗಿಂತ ಭೀಕರವಾಗಿ ಆರಂಭವಾಯಿತು. ಒಂದು ವಾರ ಸತತವಾಗಿ ಸುರಿದ ಮಳೆಗೆ ನದಿ ತುಂಬಿ ಹರಿಯಲಾರಂಭಿಸಿತು. ಬೆಟ್ಟದ ಮೇಲಿಂದ ಸಣ್ಣ ಸಣ್ಣ ಕಲ್ಲುಗಳು ಉರುಳತೊಡಗಿದವು. ಇಡೀ ಊರಿನ ಜನ ಭಯಭೀತರಾದರು.
ಊರಿನ ಹಿರಿಯರು ಸಿದ್ಧಯ್ಯನ ನೇತೃತ್ವದಲ್ಲಿ ಪ್ರತಾಪ್ ವರ್ಮನ ಬಂಗಲೆಗೆ ಬಂದರು.
ಜಮೀನ್ದಾರ್ ಅವರೇ, ಬೆಟ್ಟದ ಮೇಲಿರುವ ಹಳೆಯ ಕೆರೆಗೆ ಬಿರುಕು ಬಿಟ್ಟಿದೆ. ಮಳೆ ಹೀಗೇ ಮುಂದುವರಿದರೆ ಬೆಟ್ಟ ಕುಸಿದು, ಕೆರೆಯ ನೀರು ಇಡೀ ಊರನ್ನು ಮುಳುಗಿಸುತ್ತದೆ. ನಾವು ತಕ್ಷಣ ಬೆಟ್ಟದ ಕೆಳಗಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ನಿಮ್ಮ ಎತ್ತರದ ಗೋದಾಮು ಮತ್ತು ಹಳೆಯ ಕೋಟೆಯಲ್ಲಿ ಜನರಿಗೆ ಆಶ್ರಯ ಕೊಡಬೇಕು ಎಂದು ಸಿದ್ಧಯ್ಯ ವಿನಂತಿಸಿದ. 
ಪ್ರತಾಪ್ ವರ್ಮ ಕುಳಿತಿದ್ದ ಕುರ್ಚಿಯಿಂದ ಎದ್ದು ನಿಂತು, ಮೀಸೆ ತಿರುವುತ್ತಾ ನಕ್ಕ.
ನನ್ನ ಕೋಟೆಯೊಳಗೆ ಆ ಭಿಕ್ಷುಕರು ಬರುವುದೇ? ಅಸಾಧ್ಯ! ಆ ಬೆಟ್ಟ, ಆ ಕೆರೆ ಎಲ್ಲವೂ ನನ್ನ ಆಸ್ತಿ. ನಾನೇ ಅದನ್ನು ಕಟ್ಟಿ ನಿಲ್ಲಿಸಿದ್ದೇನೆ. ನನ್ನ ಅನುಮತಿ ಇಲ್ಲದೆ ಆ ಬೆಟ್ಟದ ಒಂದು ಕಲ್ಲು ಕೂಡ ಅಲ್ಲಾಡುವುದಿಲ್ಲ. ನೀವು ಹೆದರಿಕೊಂಡು ಓಡಿಹೋಗುವ ಹೇಡಿಗಳು. ನಾನು ಮಾತ್ರ ಈ ಬಂಗಲೆ ಬಿಟ್ಟು ಕದಲುವುದಿಲ್ಲ. ನನ್ನ ಸಂಪತ್ತು, ನನ್ನ ಅಧಿಕಾರ ನನ್ನನ್ನು ರಕ್ಷಿಸುತ್ತದೆ, ಎಂದು ಅಹಂಕಾರದಿಂದ ಗದರಿಸಿದ.
ಸಿದ್ಧಯ್ಯ ಕೈಮುಗಿದು ಹೇಳಿದ, ಪ್ರತಾಪ್ ವರ್ಮ, ಹಣ ಮತ್ತು ಅಧಿಕಾರ ಪ್ರಕೃತಿಯ ವಿಕೋಪದ ಮುಂದೆ ಕೇವಲ ಕಾಗದದ ಚೂರುಗಳು. ಅಹಂಕಾರ ಬಿಟ್ಟು ಜನರ ಪ್ರಾಣ ಉಳಿಸಿ. 
ಆದರೆ ಅಹಂಕಾರದ ಅಮಲಿನಲ್ಲಿದ್ದ ಪ್ರತಾಪ್ ವರ್ಮನಿಗೆ ಆ ಮಾತುಗಳು ಕೇಳಿಸಲಿಲ್ಲ. ಅವನು ಸಿದ್ಧಯ್ಯನನ್ನು ಅಲ್ಲಿಂದ ಹೊರಗಟ್ಟಿದ. ವಿಧಿಯಿಲ್ಲದೆ ಊರಿನ ಜನರೆಲ್ಲರೂ ಪ್ರಾಣ ಉಳಿಸಿಕೊಳ್ಳಲು ತಮಗನಿಸಿದ ಕಡೆಗೆ ಓಡಲಾರಂಭಿಸಿದರು. 
ರಾತ್ರಿ ಹನ್ನೆರಡರ ಸಮಯ. ಮಳೆಯ ಆರ್ಭಟ ನರಕಸದೃಶವಾಗಿತ್ತು. ಸಿಡಿಲಿನ ಸದ್ದು ಕಿವಿಗಡಚಿಕ್ಕುತ್ತಿತ್ತು. ಪ್ರತಾಪ್ ವರ್ಮ ತನ್ನ ಬಂಗಲೆಯ ಮೇಲ್ಮಹಡಿಯಲ್ಲಿ ನಿಂತು ವೈನ್ ಗ್ಲಾಸ್ ಹಿಡಿದು ಹೊರಗೆ ನೋಡುತ್ತಿದ್ದ. ಅವನಿಗೆ ತನ್ನ ಬಂಗಲೆಯ ಗಟ್ಟಿ ಮುಟ್ಟಾದ ಗೋಡೆಗಳ ಮೇಲೆ ಅತಿಯಾದ ನಂಬಿಕೆ ಇತ್ತು. ದಿಢೀರನೆ, ಇಡೀ ಭೂಮಿ ಕಂಪಿಸಿದಂತಾಯಿತು. ಭೀಕರವಾದ ಗರ್ಜನೆಯೊಂದು ಕೇಳಿಸಿತು. ಅದು ಸಿಡಿಲಿನ ಸದ್ದಲ್ಲ ಬೆಟ್ಟ ಕುಸಿಯುತ್ತಿದ್ದ ಸದ್ದು. ಬೆಟ್ಟದ ಮೇಲಿದ್ದ ಬಿರುಕು ಬಿಟ್ಟ ಕೆರೆ ಸಂಪೂರ್ಣವಾಗಿ ಒಡೆದು, ಮಣ್ಣು, ಕಲ್ಲು ಮತ್ತು ಮರಗಳ ಜೊತೆ ಮಹಾಪೂರವಾಗಿ ಕೆಳಗೆ ನುಗ್ಗಿ ಬರಲಾರಂಭಿಸಿತು. ಪ್ರತಾಪ್ ವರ್ಮ ನೋಡನೋಡುತ್ತಿದ್ದಂತೆ ಆ ಪ್ರವಾಹದ ನೀರು ಅವನ ಬಂಗಲೆಯ ತೋಟವನ್ನು ಆವರಿಸಿತು. ಅವನ ಐಷಾರಾಮಿ ಕಾರುಗಳು ಕಾಗದದ ದೋಣಿಗಳಂತೆ ಕೊಚ್ಚಿ ಹೋದವು. 
ಅದೇ ಸಮಯದಲ್ಲಿ ಅವನ ನಂಬಿಕಸ್ಥ ಆಳು ಓಡಿ ಬಂದು, "ಳಯಜಮಾನರೇ, ಕೆಳಗಿನ ಮಹಡಿಗೆ ನೀರು ನುಗ್ಗಿದೆ. ಗೋಡೆಗಳು ಬಿರುಕು ಬಿಡುತ್ತಿವೆ. ತಕ್ಷಣ ಇಲ್ಲಿಂದ ಹೊರಡಬೇಕು, ಬನ್ನಿ ಎಂದು ಕಿರುಚಿದ. 
ಆದರೆ ಪ್ರತಾಪ್ ವರ್ಮ ತನ್ನ ಕೋಣೆಯಲ್ಲಿದ್ದ ಚಿನ್ನ, ಹಣದ ಪೆಟ್ಟಿಗೆಗಳನ್ನು ನೋಡಿ, ಇಲ್ಲ ಇದನ್ನು ಬಿಟ್ಟು ನಾನು ಬರುವುದಿಲ್ಲ. ಇದು ನನ್ನ ಸಾಮ್ರಾಜ್ಯ ಎಂದು ಹಠ ಹಿಡಿದ. ಆಳು ಜೀವ ಉಳಿಸಿಕೊಳ್ಳಲು ಅಲ್ಲಿಂದ ಓಡಿಹೋದ.

ಕ್ಷಣಾರ್ಧದಲ್ಲಿ ಬಂಗಲೆಯ ತಳಪಾಯ ನಡುಗಿತು. ಬೃಹತ್ ನೀರಿನ ಅಲೆ ಬಂಗಲೆಯ ಮುಖ್ಯ ದ್ವಾರವನ್ನು ಮುರಿದು ಒಳನುಗ್ಗಿತು. ಪ್ರತಾಪ್ ವರ್ಮನಿಗೆ ಆಗ ಪರಿಸ್ಥಿತಿಯ ಗಂಭೀರತೆ ಅರಿವಾಯಿತು. ಕೈಲಿದ್ದ ಹಣದ ಚೀಲಗಳನ್ನು ಹಿಡಿದುಕೊಂಡು ಅವನು ಹೇಗೋ ಮಾಡಿ ಬಂಗಲೆಯಿಂದ ಹೊರಗೆ ಬಂದು, ನೀರಿನ ಪ್ರವಾಹದ ವಿರುದ್ಧ ಈಜಲು ಯತ್ನಿಸಿದ. ಆದರೆ, ಪ್ರಕೃತಿಯ ರೌದ್ರಾವತಾರದ ಮುಂದೆ ಅವನ ದೈಹಿಕ ಬಲ ಶೂನ್ಯವಾಗಿತ್ತು.
ಕತ್ತಲಿನಲ್ಲಿ, ನೀರಿನ ಸೆಳತಕ್ಕೆ ಸಿಲುಕಿ ಪ್ರತಾಪ್ ವರ್ಮ ಕೊಚ್ಚಿ ಹೋಗುತ್ತಿದ್ದ. ಜೀವ ಉಳಿಸಿಕೊಳ್ಳಲು ಸನಿಹದಲ್ಲಿದ್ದ ಒಂದು ದೊಡ್ಡ ಮರದ ಕೊಂಬೆಯನ್ನು ಗಟ್ಟಿಯಾಗಿ ಹಿಡಿದುಕೊಂಡ. ಮಳೆ ನಿಧಾನವಾಗಿ ಕಡಿಮೆಯಾಗುತ್ತಾ ಬಂತು, ಬೆಳಕು ಹರಿಯಿತು. 
ಬೆಳಕಿನಲ್ಲಿ ಅವನು ಸುತ್ತಲೂ ನೋಡಿದಾಗ ಅವನಿಗೆ ಆಘಾತ ಕಾದಿತ್ತು. ಅವನ ಹೆಮ್ಮೆಯ ಬಂಗಲೆ, ಕೋಟೆ, ಸಂಪತ್ತು ಎಲ್ಲವೂ ಮಣ್ಣು ಪಾಲಾಗಿತ್ತು. ಪ್ರಕೃತಿ ಎಲ್ಲವನ್ನೂ ಸಮಾನವಾಗಿಸಿತ್ತು. ಜಮೀನ್ದಾರ್ ಆಗಿದ್ದವನು ಈಗ ಕೇವಲ ಪ್ರಾಣ ಭಿಕ್ಷೆ ಬೇಡುವ ಸ್ಥಿತಿಯಲ್ಲಿದ್ದ. ಅವನು ಹಿಡಿದುಕೊಂಡಿದ್ದ ಮರದ ಕೊಂಬೆಯೂ ನಿಧಾನವಾಗಿ ಮುರಿಯತೊಡಗಿತು. ಯಾರಾದರೂ ಬದುಕಿಸಿ ನನ್ನನ್ನು ಬದುಕಿಸಿ ಎಂದು ಜೋರಾಗಿ ಕೂಗಲಾರಂಭಿಸಿದ. ಅವನ ಅಹಂಕಾರವೆಲ್ಲಾ ನೀರಿನಲ್ಲಿ ಕರಗಿ ಹೋಗಿತ್ತು.
ಆಗ ದೂರದಲ್ಲಿ ಒಂದು ದೋಣಿ ಬರುವುದು ಕಾಣಿಸಿತು. ಊರಿನ ಜನರನ್ನು ರಕ್ಷಿಸಲು ಸಿದ್ಧಯ್ಯ ಮತ್ತು ಕೆಲವು ತರುಣರು ದೋಣಿಯಲ್ಲಿ ಬರುತ್ತಿದ್ದರು. ಪ್ರತಾಪ್ ವರ್ಮನನ್ನು ನೋಡಿದ ತರುಣನೊಬ್ಬ, ತಾತಾ, ಅದು ಜಮೀನ್ದಾರ್ ಪ್ರತಾಪ್ ವರ್ಮ. ನಮಗೆ ಆಶ್ರಯ ಕೊಡದ ಆ ಅಹಂಕಾರಿಯನ್ನು ನಾವು ಯಾಕೆ ಬದುಕಿಸಬೇಕು? ಹಾಗೇ ಬಿಟ್ಟುಬಿಡೋಣ ಎಂದ. 
ಆದರೆ ಸಿದ್ಧಯ್ಯ ಮರುಮಾತಾಡದೆ ದೋಣಿಯನ್ನು ಪ್ರತಾಪ್ ವರ್ಮನ ಹತ್ತಿರ ತರಲು ಹೇಳಿದ. ಸಿದ್ಧಯ್ಯ ತನ್ನ ಮುದಿಕೈಗಳನ್ನು ಚಾಚಿ, ನೀರಿನಲ್ಲಿದ್ದ ಪ್ರತಾಪ್ ವರ್ಮನ ಕೈ ಹಿಡಿದು ದೋಣಿಯೊಳಗೆ ಎಳೆದುಕೊಂಡ. ದೋಣಿಯೊಳಗೆ ಬಿದ್ದ ಪ್ರತಾಪ್ ವರ್ಮ ತಲೆ ತಗ್ಗಿಸಿ ಕುಳಿತಿದ್ದ. ಅವನ ಮೈ ನಡುಗುತ್ತಿತ್ತು. ತಾನು ಕೀಳಾಗಿ ಕಂಡ ಊರಿನ ಜನ ಮತ್ತು ಸಿದ್ಧಯ್ಯನೇ ಇಂದು ತನ್ನ ಪ್ರಾಣ ಉಳಿಸಿದ್ದರು.
ಅವನು ಸಿದ್ಧಯ್ಯನ ಕಾಲಿಗೆ ಬಿದ್ದು, ಕಣ್ಣೀರು ಹಾಕುತ್ತಾ ಹೇಳಿದ, "ಸಿದ್ಧಯ್ಯ, ನನ್ನನ್ನು ಕ್ಷಮಿಸಿಬಿಡು. ನನ್ನ ಹಣ, ನನ್ನ ಬಂಗಲೆ, ನನ್ನ ಅಧಿಕಾರ ಯಾವುದೂ ನನ್ನನ್ನು ರಕ್ಷಿಸಲಿಲ್ಲ. ನಿನ್ನ ಮಾತು ನಿಜವಾಯಿತು. ಪ್ರಕೃತಿಯ ಮುಂದೆ, ವಿಧಿಯ ಮುಂದೆ ನಾನು ಕೇವಲ ಧೂಳಿನ ಕಣ. ನನ್ನ ಅಹಂಕಾರ ನನ್ನನ್ನು ವಿನಾಶದ ಅಂಚಿಗೆ ತಂದಿತ್ತು. 
ಸಿದ್ಧಯ್ಯ ಪ್ರತಾಪ್ ವರ್ಮನ ಹೆಗಲ ಮೇಲೆ ಕೈಯಿಟ್ಟು ಮೃದುವಾಗಿ ಹೇಳಿದ, ಎದ್ದೇಳು ಪ್ರತಾಪ್ ವರ್ಮ. ಪ್ರಕೃತಿ ನಮಗೆ ಶಿಕ್ಷೆ ಕೊಡುವುದಿಲ್ಲ, ಪಾಠ ಕಲಿಸುತ್ತದೆ. ನಿನ್ನ ಬಂಗಲೆ ಕರಗಿ ಹೋಗಿರಬಹುದು, ಆದರೆ ನಿನ್ನೊಳಗಿನ ಅಹಂಕಾರ ಕರಗಿದ್ದು ಒಳ್ಳೆಯದಾಯಿತು. ಮನುಷ್ಯನಿಗೆ ಇರಬೇಕಾದದ್ದು ಸಂಪತ್ತಿನ ಗರ್ವವಲ್ಲ, ಮಾನವೀಯತೆಯ ಗೌರವ. ಈಗಲಾದರೂ ನಿನಗೆ ನಿಜವಾದ ಜ್ಞಾನೋದಯವಾಯಿತಲ್ಲ, ಅದೇ ದೊಡ್ಡದು.
ಅಂದು ರುದ್ರಪುರದಲ್ಲಿ ಪ್ರವಾಹ ನಿಂತಿತು. ಅದರ ಜೊತೆಗೆ ಜಮೀನ್ದಾರ್ ಪ್ರತಾಪ್ ವರ್ಮನ ಅಹಂಕಾರದ ಕಥೆಯೂ ಮುಕ್ತಾಯವಾಗಿತ್ತು. ಮಣ್ಣು ಪಾಲಾದ ಬಂಗಲೆಯ ಅವಶೇಷಗಳ ಮಧ್ಯೆ, ಒಬ್ಬ ಸಾಮಾನ್ಯ ಮನುಷ್ಯನಾಗಿ ಪ್ರತಾಪ್ ವರ್ಮ ಊರಿನ ಜನರ ಜೊತೆ ಸೇರಿ ಹೊಸ ಜೀವನವನ್ನು ಕಟ್ಟಿಕೊಳ್ಳಲು ಮುಂದಾದ.

ಕಥೆಯ ನೀತಿ: ಹಣ, ಅಧಿಕಾರ ಶಾಶ್ವತವಲ್ಲ. ಪ್ರಕೃತಿ ಮತ್ತು ಮಾನವೀಯತೆಯ ಮುಂದೆ ಅಹಂಕಾರ ಯಾವಾಗಲೂ ಮೊಣಕಾಲೂರಲೇಬೇಕು.