Everything is for the best books and stories free download online pdf in Kannada

ಆಗೋದೆಲ್ಲ ಒಳ್ಳೇದಕ್ಕೆ

ಆಗೋದೆಲ್ಲ ಒಳ್ಳೇದಕ್ಕೆ

(ಹಾಸ್ಯ ಭರಿತ ಪ್ರೇಮ ಕಥೆ)

ಲೇಖಕ ವಾಮನಾಚಾರ್ಯ


ಒಂದು ವಾರದ ಹಿಂದೆ ಮದುವೆ ಆದ ಪುಷ್ಪಾ ಹಾಗೂ ಮಕರಂದ ತಮ್ಮ ನೂತನ ಮನೆ 'ಚಂದಿರ' ದ ವಾಸ್ತು ಶಾಂತಿ ಅದ್ಧೂರಿ ಯಾಗಿ ಮುಗಿಸಿ ಅಲ್ಲಿಯೇ ವಾಸ ಮಾಡಿದರು. ರಾಘವಪುರ್ ನಗರದ ಹೊರವಲಯದ ಆದರ್ಶ ಬಡಾವಣೆ ಯಲ್ಲಿ ಕಟ್ಟಿದ ಇದು ಮೊದಲ ಮನೆ.

ಮರು ದಿವಸ ಭಾನುವಾರ ಬೆಳಗಿನ ಏಳು ಗಂಟೆಗೆ ಕಾಫಿ ರುಚಿಯನ್ನು ಸವಿಯುತ್ತ ಸರಸ ಸಲ್ಲಾಪ ಮಾಡುತ್ತಿದ್ದ ಅವರಿಗೆ ತಮ್ಮ ಜೀವನ ದಲ್ಲಿ ಆದ ಒಂದು ಮರೆಯಲಾಗದ ಅನುಭವ ನೆನಪು ಮಾಡಿಕೊಂಡರು.

"ಮಕರ0ದ, ಕಳೆದ ವರ್ಷ ಜೋಗ್ ಜಲಪಾತ ನೋಡಲು ಹೋಗಿದ್ದೆ. 253 ಮೀಟರ್ ಆಳಕ್ಕೆ ಧೂಮ್ಮಿಕ್ಕುವ ರಮಣೀಯ ದೃಶ್ಯ ಕಣ್ತುಂಬಿ ಕೊಳ್ಳಲು ಎರಡು ಕಣ್ಣು ಸಾಲದು. ಕಾಮನ ಬಿಲ್ಲು ಕಾಣುವ ಸುಂದರವಾದ ದೃಶ್ಯ ಇವುಗಳನ್ನು ವೀಕ್ಷಿಸಿ ಆನಂದ ವಾಯಿತು. ನನ್ನ ಪಕ್ಕದಲ್ಲಿ ಇರುವ ನೀನು ಅಪರಿಚಿತ. ಆಗ ನಾವು ನಿಸರ್ಗ ತಾಣಕ್ಕೆ ಬಂದ ಪ್ರವಾಸಿಗರು. ಜಲಪಾತದ ಬೋರ್ಗರೆಯುವ ನೀರು ಎಷ್ಟು ನೋಡಿದರೂ ಕಡಿಮೆ ಅನಿಸಿತು. ವಾಪಸ್ ಬರುವಾಗ ಅವಸರದಲ್ಲಿ ನಾನು ಕಾಲುಜಾರಿ ಬೀಳುವದ ರಲ್ಲಿ ಇದ್ದೆ. ನೀನು ನನ್ನ ಕೈ ಹಿಡಿದು ಆಗುವ ಅನಾಹುತದಿಂದ ತಪ್ಪಿಸಿದಿ. ಆ ಒಂದು ಕ್ಷಣ ನಾನು ಗಾಬರಿ ಆಗಿ ನನಗೆ ಅರಿವಾಗದೆ ನಿನ್ನನ್ನು ಆಲಿಂಗನ ಮಾಡಿ ಕೊಂಡೆ. ನಿನ್ನ ಅಪ್ಪುಗೆ ಯಿಂದ ಹೊರ ಬಂದಮೇಲೆ ನಿನ್ನದೇನೂ ತಪ್ಪಿಲ್ಲದೇ ಇದ್ದರೂ ನಿನಗೆ ಧನ್ಯವಾದ ಹೇಳುವ ಬದಲು ನಿನ್ನ ಮೇಲೆ ಬೈಗಳ ಸುರಿಮಳೆ ಮಾಡಿದೆ. ಆದರೂ ನೀನು ಶಾಂತ ನಾಗಿ ಹೋದೆ. ನಂತರ ನಿನಗೆ ಅಲ್ಲಿ ಹುಡುಕಿದೆ ಸಿಗಲೇ ಇಲ್ಲ. ಇಂದಿಲ್ಲ ನಾಳೆ ನಿನ್ನ ಭೇಟಿ ಆಗುವದು ಎನ್ನುವ ಧೃಡ ವಾದ ವಿಶ್ವಾಸ ದಿಂದ ಮುಂದೆ ನಡೆದೆ.”

“ಪುಷ್ಪಾ, ಆ ಕ್ಷಣ ದಲ್ಲಿ ನನಗೆ ಏನು ಹೇಳಬೇಕು ತಿಳಿಯದೆ ಹೋಯಿತು. ಅಂದು ಪ್ರವಾಸಿಗರು ಬಹಳ ಇದ್ದು ನಾವಿಬ್ಬರೂ ಬೇರೆ ಬೇರೆ ಕಡೆ ಹೋಗಬೇಕಾಯಿತು. ಆದರೆ ಒಂದು ವಿಷಯ ಸತ್ಯ. ನಿನ್ನ ರೂಪ, ಲಾವಣ್ಯ, ಕೇಶಾಲಂಕಾರ, ಹಣೆಯಮೇಲಿನ ಬಿಂದಿ, ಡಿಜೈನರ್ ಡ್ರೆಸ, ಆಕರ್ಷಕ ವಾದ ಪಾದರಕ್ಷೆ, ಬಯ್ಯು ವಾಗಿನ ಚಲುವಾದ ಮುಖ ನೋಡಿ ನಿಜವಾಗಿಯೂ ಬೆರಗಾದೆ.ಇಂತಹ ಹುಡುಗಿ ನನ್ನ ಪತ್ನಿ ಆದರೆ ಎಂತಹ ಅದೃಷ್ಟವಂತ ನಾನು ಎಂದು ಅಂದುಕೊಂಡೆ. ನಿನಗೆ ನನ್ನಲ್ಲಿ ಯಾವ ಆಕರ್ಷಣೆ ಕಂಡು ಬಂದಿತು?”

ಆಗ ಪುಷ್ಪಾ ಗೆ ಸಂತೋಷವಾಗಿ,

“ನಿನ್ನ ಶಾಂತ ಸ್ವಭಾವ, ಗಾಂಭೀರ್ಯ, ಗ್ರಾಂಡ್ ಪರ್ಸ್ ನ್ಯಾ ಲಿಟಿ ನನಗೆ ತುಂಬಾ ಹಿಡಿಸಿ ನನಗಾಗಿಯೇ ದೇವರು ನಿನ್ನನ್ನು ಹುಟ್ಟಿಸಿದ್ದಾನೆ ಎಂದು ಅನಿಸಿತು. ನಂತರ ನೀನು ಕಾಣಲೇ ಇಲ್ಲ. ತುಂಬಾ ನಿರಾಸೆ ಆಯಿತು. ಆದರೆ ಒಂದು ವಿಷಯ ನಿನಗೆ ಹೇಳಲೇ ಬೇಕು.”

“ಅದೇನು ಬೇಗ ಹೇಳು.”

“ಬಿ ಕಾಮ್ ಮುಗಿಸಿ ಕೆಲಸ ಹುಡುಕುತ್ತ ಆರು ತಿಂಗಳು ಆದಮೇಲೆ ರಾಘವಪುರ್ ಬಂದೆ. ನನ್ನ ಚಿಕ್ಕಪ್ಪ ನಿನ್ನ ಹತ್ತಿರ ಕರೆದು ಕೊಂಡು ಬಂದ. ನಿನಗೆ ನೋಡಿದ ಕೂಡಲೇ ರೋಮಾಂಚನ ವಾಗಿ ಹಿಂದಿನ ನೆನಪು ಮರುಕಳಿಸಿತು. ಆಮೇಲೆ ಆದ ಘಟನೆಗಳು ನಿನಗೆ ಗೊತ್ತೇ ಇದೆ. ನಿನಗೆ ಭೇಟಿ ಆಗುವ ಮೊದಲು ಚಿಕ್ಕಪ್ಪನ ಸಲಹೆ ಮತ್ತು ನನ್ನ ಒಪ್ಪಿಗೆ ಆದಮೇಲೆ ಇದೇ ಊರಿನಲ್ಲಿ ಒಬ್ಬ ಹುಡುಗನ ಜೊತೆಗೆ ಮದುವೆ ನಿಶ್ಚಿತಾರ್ಥ ಕೂಡಾ ಆಯಿತು. ಈ ವಿಷಯ ಏಕೆ ಹೇಳಲಿಲ್ಲ ಎನ್ನುವದು ನಿನ್ನ ಸಹಜವಾದ ಪ್ರಶ್ನೆ. ಅದನ್ನು ನಾನು ಈಗ ಅಪ್ರಸ್ತುತ ಎಂದು ಭಾವಿಸಿದೆ. ನಿನ್ನನ್ನೇ ಮದುವೆ ಆದ ಸುದ್ದಿ ಅವನಿಗೆ ಗೊತ್ತಾಗಿ ತುಂಬಾ ಕೋಪ ಮಾಡಿಕೊಂಡ.”

“ಪುಷ್ಪಾ, ಅವನು ಯಾರು?”

“ಸರಿಯಾದ ಸಮಯ, ಸರಿಯಾದ ಸ್ಥಳದಲ್ಲಿ ಹೇಳುತ್ತೇನೆ.”

ಹಾಸ್ಯ ಭರಿತ ಮಾತು ಹಾಗೆಯೇ ಮುಂದು ವರೆಯಿತು. ಇಬ್ಬರ ಜೋರಾಗಿ ಬಿದ್ದು ಬಿದ್ದು ನಗುವದನ್ನು ಕೇಳಲು ಅಲ್ಲಿ ಯಾರೂ ಇದ್ದಿಲ್ಲ.

"ಪುಷ್ಪಾ, ನಿನಗೆ ಗೊತ್ತಿರುವಂತೆ ನಮ್ಮ ಪ್ರೊಗ್ರೆಸಿವ್ ಕಂಪ್ಯೂಟರ್ ಸೇಲ್ಸ ಅಂಡ್ ಸರ್ವೀಸ್ ಬಿಜಿನೆಸ್, ಎರಡನೇ ವರ್ಷದ ವಾರ್ಷಿಕೋತ್ಸವದ ಇನ್ನೇನು ಬಂದೆ ಬಿಟ್ಟಿತು. ಹೊಸ ಹೊಸ ಸಮಸ್ಯೆಗಳು ಉದ್ಭವ ವಾಗುತ್ತ ಇದೆ."

"ವ್ಯಾಪಾರ ಬೆಳೆದಂತೆ ಸಮಸ್ಯೆಗಳು ಬರುವದು ಸಾಮಾನ್ಯ. ಬೇಗನೆ ಅವುಗಳ ಪರಿಹಾರ ಹುಡುಕು. ನನಗೆ ಏನಾದರೂ ಉಪಯುಕ್ತ ಐಡಿಯಾ ಗಳು ತಲೆಯಲ್ಲಿ ಬಂದರೆ ತಪ್ಪದೆ ತಿಳಿಸುವೆ,”

"ಮಾತನಾಡುವದು ಬಹಳ ಸುಲಭ. ಅದನ್ನು ಕೃತಿಯಲ್ಲಿ ತರುವುದು ತುಂಬಾ ಕಷ್ಟ. ಆದರೆ ಕೆಲವೊಂದು ಸಮಸ್ಯೆ ಗಳಿಗೆ ಪರಿಹಾರವೇ ಇಲ್ಲ ಎನ್ನುವ ಕೊರಗು ನನ್ನನ್ನು ಕಾಡುತ್ತಾ ಇದೆ.”

ಪುಷ್ಪಾಗೆ ಆ ಸಮಸ್ಯ ಗಳು ಯಾವುದು ಎನ್ನುವದು ಗೊತ್ತಿದ್ದರೂ ಅದನ್ನು ಮುಂದು ವರೆಸುವ ಸಹಾಸ ಮಾಡಲಿಲ್ಲ.

"ಅದೆಲ್ಲ ಇರಲಿ. ಈಗ ನಮಗೆ ಸಂತೋಷದ ಸಮಯ. ಈ ಕ್ಷಣ ಅದೆಲ್ಲ ವನ್ನು ಮರೆತು ಬಿಡು. ಅಂದಹಾಗೆ ನಾವು ಬರುವ ಭಾನುವಾರ ಹನಿಮೂನ್ ಗೆ ಅದೇ ಜೋಗ್ ಜಲಪಾತ ನೋಡಲು ಹೋಗೋಣ. ನಾವಿಬ್ಬರೂ ಆಲಿಂಗನ ಮಾಡಿಕೊಂಡ ಆ ಸ್ಪಾಟ್ ನಮ್ಮ ಜೀವನದಲ್ಲಿ ಮರೆಯಲಾಗದ ಸ್ಥಳ. ಅದನ್ನು ನೋಡಿದರೆ ಖುಷಿ ಆಗುವದು,” ಎಂದಳು.

"ಆಯಿತು. ನಾನೇ ಹೇಳಬೇಕು ಎನ್ನುವಾಗ ನೀನೇ ಹೇಳಿದೆ. ಖರ್ಚಿನ ಬಗ್ಗೆ ಚಿಂತೆ ಬೇಡ."

"ಆಗಲಿ."

ಮರು ದಿವಸವೇ ಹನಿಮೂನ್ ಪ್ರಯಾಣ ಮಾಡಿದರು. ಮೂರು ದಿವಸದ ಪ್ರಯಾಣದಲ್ಲಿ ಮೋಜು, ಮಸ್ತಿ, ಮನರಂಜನೆ ಹಾಗೂ ಸುತ್ತು ಮುತ್ತು ಇರುವ ಪ್ರೇಕ್ಷಣಿಯ ಸ್ಥಳಗಳ ಭೇಟಿ ಕೊಟ್ಟರು. ಅಂದು ಆಲಿಂಗನ ಮಾಡಿಕೊಂಡ ಸ್ಪಾಟ್ ನೋಡಲು ಮರೆಯಲಿಲ್ಲ.

ಒಂದು ತಿಂಗಳು ಕಳೆಯಿತು.

ಒಂದು ದಿವಸ ಭಾನುವಾರ ಪುಷ್ಪಾ ಳ ಹುಟ್ಟು ಹಬ್ಬ. ಚಿಕ್ಕಪ್ಪ ನನ್ನು ಮನೆಗೆ ಊಟಕ್ಕೆ ಕರೆದಳು. ಕೇಕ್ ಕಟ್ ಮಾಡುವದು ರಾತ್ರಿ ಇಟ್ಟುಕೊಂಡರು. ಬೆಳಗ್ಗೆ ಚಿಕ್ಕಪ್ಪ ಸ್ನಾನ ಮಾಡಿ ಪೂಜೆ ಮಾಡುತ್ತಿರುವಾಗ ದಂಪತಿಗಳು ಹಾಲ್ ನಲ್ಲಿ ಹರಟೆಯಲ್ಲಿ ಮಗ್ನ. ಅದೇ ಸಮಯಕ್ಕೆ ಒಂದೇ ಸಮನೆ ಬಾಗಿಲು ಬಡಿದ ಶಬ್ದ ಕೇಳಿದ ಮಕರಂದನಿಗೆ ಕೋಪ ಬಂದರೆ ಪುಷ್ಪಾ ಗೆ ಈ ಸಮಯದಲ್ಲಿ ಯಾರಪ್ಪ ಬಂದರು ಎನ್ನುವ ಕಳವಳ.

ಪೂಜೆ ಮುಗಿಸಿದ ಚಿಕ್ಕಪ್ಪ ಹೊರಗೆ ಬಂದು,

“ಬಾಗಿಲು ಬಡೆಯುವವರು ಪರಿಚಯದವನೇ ಇದ್ದರೂ ಜಾಗರೂಕರಾಗಿರಿ. ಚಿಂತೆ ಬೇಡ. ದೇವರು ನಿಮ್ಮಂಥ ಒಳ್ಳೆಯ ಜನರನ್ನು ಕಾಪಾಡುತ್ತಾನೆ.ಗಾಬರಿ ಆಗಬೇಡಿ.”

ಇಬ್ಬರಿಗೂ ಇದನ್ನು ಕೇಳಿ ಕುತೂಹಲ ವಾಯಿತು.

“ಚಿಕ್ಕಪ್ಪ, ಬಾಗಿಲು ಬಡಿಯುವ ವ್ಯಕ್ತಿ ನಿಮಗೆ ಗೊತ್ತೇ? ನೀವು ಅವರನ್ನು ನೋಡಿದಿರಾ? ಎಂದು ಕೇಳಿದಳು ಪುಷ್ಪಾ.

“ನನಗೆ ಅವನು ಬಾಗಿಲು ಪಕ್ಕದಲ್ಲಿ ಇರುವ ಕಿಟಕಿಯಲ್ಲಿ ಕಾಣಿಸಿದ.”

“ಯಾರು?” ಎಂದು ಕೇಳಿದ ಮಕರಂದ.

“ಬಾಗಿಲು ಬಡೆಯುವವನು ರಾಘವಪುರ ನಗರದಲ್ಲಿ ಇರುವ ಪ್ರಸಿದ್ಧ ‘ಸ್ಪಂದನ ಮೆಡಿಕಲ್ ಸ್ಟೋರ್’ ಮಾಲೀಕ. ಅವನು ಸ್ವಂತ ಎರಡು ಮನೆಗಳು ಹಾಗೂ ಎರಡು ವಾಣಿಜ್ಯ ಮಳಿಗೆ ಗಳ ಮಾಲೀಕ.”

ಇದನ್ನು ಕೇಳಿದ ಪುಷ್ಪಾಗೆ ಮನಸ್ಸು ಕಸವಿಸಿ ಆಗಿ,

“ಮಕರಂದ ನಿನಗೆ ಆ ಹುಡುಗ ಯಾರು ಎಂದು ಕೇಳಿದಿ. ಈಗ ಸರಿಯಾದ ಸಮಯ ಹಾಗೂ ಸ್ಥಳದಲ್ಲಿ ಇದ್ದೇವೆ,” ಎಂದು ಅವಸರದಿಂದ ತನ್ನ ರೂಮ್ ಗೆ ಹೋಗಿ ಒಳಗಿನಿಂದ ಬಾಗಿಲು ಹಾಕಿಕೊಂಡಳು.

ಏನು ಮಾಡಬೇಕು ಎಂಬ ಸಂದಿಗ್ಧ ಪರಿಸ್ಥಿತಿ ಎಲ್ಲರಿಗೂ ಆಯಿತು.

ಶಶಿಕಾಂತ್ ಬಂದರೆ ಯಾಕೆ ಹೆದರಿಕೆ?

ಮಕರಂದ ಎದ್ದು ಬಾಗಿಲು ತೆಗೆದು ಒಳಗೆ ಬರಲು ಹೇಳಿದ. ಇಬ್ಬರಿಗೂ ಪರಿಚಯ ಅಷ್ಟೇ.

“ಏನ್ರಿ, ಮಂಗಳ ಮೂರ್ತಿ ಅವರೇ, ನಿಮ್ಮ ಮಗಳು ಪುಷ್ಪಾ ಮದುವೆ ನಿಶ್ಚಿತಾರ್ಥ ನನ್ನ ಜೊತೆಗೆ ಮಾಡಿ ಅವಸರದಲ್ಲಿ ಈ ಮಕರಂದ ಜೊತೆಗೆ ಏಕೆ ಮದುವೆ ಮಾಡಿದಿರಿ? ನಾನು ಈ ಊರಿನ ಪ್ರತಿಷ್ಟಿತ ವ್ಯಕ್ತಿ. ಅಂದು ಸಮಾರಂಭ ಕ್ಕೆ ನಗರದ ಅತಿರಥಿ ಮಹಾರಥಿ ಬಂದಿದ್ದರು. ನನ್ನ ಸ್ಟೇಟಸ್ ತಕ್ಕಂತೆ ಗ್ರಾಂಡ್ ಮಾಡಿದೆ. ಅದಕ್ಕಾಗಿ ನಾನು ಎರಡು ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ಆ ಹಣ ನನಗೆ ಸಧ್ಯ ವಾಪಸ್ ಕೊಟ್ಟರೆ ಸುಮ್ಮನೆ ಇರುತ್ತೇನೆ. ಇಲ್ಲದೇ ಹೋದರೆ ನಿಮ್ಮ ವಿರುದ್ಧ ಮೋಸಗಾರ ಎಂದು ಕೋರ್ಟ್ ನಲ್ಲಿ ಕೇಸ್ ಹಾಕುತ್ತೇನೆ,” ಎಂದು ಕೂಗಾಡಿದ.

ಮಾತಿನ ಚಕಮಕಿ ಜೋರಾದಾಗ ಪುಷ್ಪಾ ಹೊರಗೆ ಬಂದಳು.

“ಶಶಿಕಾಂತ್ ಅವರೇ, ಮದುವೆ ನಿಶ್ಚಿತಾರ್ಥ ಆದರೆ ಮದುವೆ ಮಾಡಿಕೊಳ್ಳ ಲೇ ಬೇಕೆಂದು ಯಾವ ಕಾನೂನು ಹೇಳುವದಿಲ್ಲ. ನನಗೂ ಕಾನೂನು ಜ್ಞಾನ ಇದೆ. ನೀವು ನನಗೆ ಬೇಡ ಅನಿಸಿತು ಅಷ್ಟೇ. ಇದನ್ನು ಇಲ್ಲಿಗೆ ಮುಕ್ತಾಯ ಮಾಡಿ ಸುಮ್ಮನೆ ಕೂಡ ದಿದ್ದರೆ ನೀವು ಕೋರ್ಟ್ ಕಟ ಕಟೆಗೆ ಬಂದಾಗ ನಿಮ್ಮಅಸಲಿ ಮುಖ ಬಯಲಿಗೆ ಎಳೆಯುತ್ತೇನೆ. ಹುಷಾರ್,” ಎಂದು ಹುಂಕಾರ ಮಾಡಿದಳು.

ಶಶಿಕಾಂತ್ ಇವಳ ಕಾಳಿ ದೇವಿ ರೂಪ ನೋಡಿ ಗಾಬರಿ ಆಗಿ ಅಲ್ಲಿಂದ ಪಲಾಯನ ಮಾಡಿದ.

ಮಕರಂದ ಹಾಗೂ ಚಿಕ್ಕಪ್ಪ ಮೂಕ ಪ್ರೇಕ್ಷಕ ರಂತೆ ವೀಕ್ಷಿಸಿದರು.

ಸ್ವಲ್ಪ ಸಮಯ ಆದ ಮೇಲೆ ಪುಷ್ಪಾ ಯಥಾ ಸ್ಥಿತಿಗೆ ಬಂದಳು.

ಆಗ ಮಕರಂದ ನಗುತ್ತ,

“ಪುಷ್ಪಾ, ಶಶಿಕಾಂತ್ ಸ್ಫೂರದೃಪಿ, ಶ್ರೀಮಂತ ಹಾಗೂ ದೊಡ್ಡ ಆಸ್ತಿಗೆ ಒಬ್ಬನೇ ವಾರಸುದಾರ. ಇಷ್ಟೆಲ್ಲಾ ಇದ್ದರೂ ಅವನನ್ನು ಏಕೆ ನಿರಾಕರಿಸಿದೆ?”

“ಮಕರಂದ, ಅವನ ಚರಿತ್ರೆ ಕೇಳಿದರೆ ನೀನು ನನಗೆ ಶಬ್ಬಾಶ್ ಅನ್ನುತ್ತಿ. ನನ್ನ ಕಾಳಿ ಪಾತ್ರ ಅಭಿನಯ ಹೇಗಿತ್ತು? ಎಂದು ಕೇಳಿದಳು ನಗುತ್ತ.

“ನಿನಗೆ ಅಭಿನಯ ಕೂಡ ಬರುವದೇ?” ಎಂದು ಕೇಳಿದ ಮಕರಂದ.

ಚಿಕ್ಕಪ್ಪ ಮಧ್ಯ ಪ್ರವೇಶಿಸಿ,

“ಅಳಿಯ0ದಿರೆ, ನನ್ನ ಮಗಳು ಬಹುಮುಖ ಪ್ರತಿಭೆ ಹೊಂದಿದ ಅಪರೂಪದ ಹುಡುಗಿ.”

ಮತ್ತೆ ಹಾಸ್ಯದ ಮಾತುಗಳು ಮುಂದು ವರೆದವು.

"ಮಕರಂದ, ಹೊರಗಡೆ ನಿಮ್ಮ ಕೂಗಾಡುವದು ನಡೆದಾಗ ರೂಮ್ ನಲ್ಲಿ ನನ್ನ ದೃಷ್ಟಿ ಗೋಡೆ ಮೇಲೆ ಇರುವ ಮನೆ ದೇವತೆ ಕಾಳಿ ಮಾತೆ ಕಡೆ ಹೋಯಿತು. ಮಾತೆಗೆ ಪ್ರಾರ್ಥನೆ ಮಾಡುವಾಗ ಬಂದವನನ್ನು ಓಡಿಸಲು ಶಕ್ತಿ ಕೊಡು ಎಂದು ಬೇಡಿಕೊಂಡೆ. ಒಂದು ನಿಮಿಷದಲ್ಲಿ ರೆಡಿ ಆಗಿ ಹೊರಗೆ ಬಂದೆ."

“ಪುಷ್ಪಾ, ಮಕರಂದ ನೀವು ನಿಶ್ಚಿ0ತೆ ಆಗಿ ಇರಿ. ಶಶಿಕಾಂತ್ ಏನಾದರೂ ಕೋರ್ಟ್ ಗೆ ಹೋದರೆ ಅವನಂತೆ ತೀರ್ಪು ಬಂದರೆ ನಾನು ಅವನಿಗೆ ಹಣ ಕೊಡುತ್ತೇನೆ.”

ಎಲ್ಲರೂ ಬಿದ್ದು ಬಿದ್ದು ನಕ್ಕರು.

ಅಂದು ವಿವಿಧ ತರಹದ ರುಚಿಕರ ಆಹಾರ ಸೇವಿಸುವಾಗ ಚಿಕ್ಕಪ್ಪ ನಗುತ್ತ,

‘ಆಗೋದೆಲ್ಲ ಒಳ್ಳೆಯದಕ್ಕೆ’ ಎಂದರು.

“ಚಿಕ್ಕಪ್ಪ ಎಂದರೆ ಹೀಗಿರಬೇಕು,”ಎಂದು ಪುಷ್ಪಾ ಹೇಳಿದಳು.

ಇದನ್ನು ಕೇಳಿದ ಮಕರಂದ ಎದ್ದು ‘ನಮ್ಮ ಸಂಸಾರ ಆನಂದ ಸಾಗರ’ ಎಂದು ಹಾಡುತ್ತ ಕುಣಿದಾಡಿದ.